ವೈಕುಂಠ ದರ್ಶನ ಮಾಡಿಯೆ ತಿಳಿಯಬೇಕು. ಅಲ್ಲಿನ ಸಪ್ತದ್ವಾರಗಳು,ದ್ವಾರಪಾಲಕರು, ಶೇಷಶಯನನ ಶಯ್ಯಾಗೃಹ, ಸುತ್ತೆಲ್ಲ ಕ್ಷೀರಸಾಗರ, ಯೋಗ ನಿದ್ರೆಯಲ್ಲಿಯೂ ಆ ಮಹಾವಿಷ್ಣುವಿನ ಮಂದಸ್ಮಿತ ವದನ ಬಿತ್ತರಿಸುವ ಮೌನ ಧ್ವನಿಗಳು ಗಂಭೀರ ಅಲೆಗಳೋಪಾದಿಯಲ್ಲಿ ದಿಕ್ ತಟಗಳನ್ನು ತಟ್ಟುತ್ತಿವೆಯಲ್ಲ; ಆ ನಿಗೂಢಾರ್ಥಗಳು! ಜಗತ್ತಿನ ನಶ್ವರ ಜೀವರಾಶಿಗಳಿಗೆ ಅದೇನು ಸುಂದರ ನೋಟವೋ, ಅದ್ಯಾವ ಅಮೃತ ಘಳಿಗೆಯಲಿ ಕಣ್ತೆರೆದು ಕೃಪಾದೃಷ್ಟಿ ಬೀರಲಿರುವುದೋ ಆ ನಯನ ಮನೋಹರ ಸ್ವರೂಪವು!
ಸೃಷ್ಟಿಯಾದ್ಯಂತದಲಿ ಏನೆಲ್ಲವೂ ನಿಗಮಗೋಚರವೆನಿಸಿದರೂ ಆ ಚಿತ್ ಶಕ್ತಿಯ ಕ್ರಿಯೆಗಳು ಮುಂದೆ ಹೇಗಿರುತ್ತವೆಂಬುದು ಕೆಲವೊಮ್ಮೆಅವ್ಯಕ್ತ ಅಗೋಚರವೇ. ತನ್ನ ವಲ್ಲಭನಾದ ಶ್ರೀಹರಿಯ ಹೃದಯ ಕಮಲದಲ್ಲಿ ಪ್ರಾಣವನ್ನೇ ಇಟ್ಟಿರುವ ಮಹಾಲಕ್ಷ್ಮಿಯು ಇಲ್ಲಿ ಸಂಪ್ರೀತಳಾಗಿರುವಳು. ಚಿರಂತನ ಸೌಭಾಗ್ಯ ಸಂಪತ್ತುಗಳು ಹೇಗೆ ಒದಗಿ ಬರುತ್ತವೆಂಬುದಕ್ಕೆ ಸಾಕ್ಷೀಭಾವವನ್ನೇ ನುಡಿಯುತ್ತಿರುವಳು. ಸಾನುರಾಗದಿಂದ ಶ್ರೀಹರಿಯ ಸೇವೆ ತಾನೆ ಮುದದಿಂದ ಮಾಡುತ್ತಿರುವಳು. ಏನು ಧನ್ಯಳೋ ಲಕ್ಷ್ಮಿ; ಎಂಥ ಮಾನ್ಯಳೋ...!! ವೈಕುಂಠದ ಈ ಸುಖೀ ವೈಭವ ಯಾರಿಗೆ ತಾನೆ ಮೆಚ್ಚುಗೆಯಾಗುವುದಿಲ್ಲ..
ಇದ್ಯಾವುದರ ಪರಿವೆಯೂ ಇಲ್ಲದೇನೆ ಭೃಗು ಮಹರ್ಷಿ ಬಿರುಗಾಳಿಯಂತೆ ಬರುತ್ತಿರುವನು. ಆತನ ತಲೆಯಲ್ಲಿ ತಿರುಗುತ್ತಿರುವುವು;ಸತ್ಯಲೋಕ ಮತ್ತು ಕೈಲಾಸ ಪರ್ವತದಲ್ಲಿ ನಡೆದ ಕಹಿ ಘಟನೆಗಳೇ. ಬ್ರಹ್ಮ, ಮಹೇಶ್ವರರಿಬ್ಬರೂ ತನಗೆ ಮಖಭಂಗ ಮಾಡಿದರು. ತಮ್ಮ ರಜೋಗುಣ ಮತ್ತು ತಮೋಗುಣಗಳನ್ನೆ ತೋರಿ ಸಾತ್ವಿಕ ಶಕ್ತಿಗೆ ಅಪಚಾರ ಮಾಡಿಬಿಟ್ಟರು. ಇನ್ನೇನು! ವೈಕುಂಠದ ಚಿತ್ರಣವೂ ಬೇರೆ ಇರಲಾರದು. ಇಡೀ ಜಗತ್ತೇ ಇಂದು ಪರಮಪಾಪಿಗಳಿಂದ ತುಂಬಿದೆ. ಅನ್ಯಾಯ, ಲೋಭ, ಮೋಹ, ಮದ, ಮಾತ್ಸರ್ಯ, ಹಿಂಸೆ-ಕ್ರೌರ್ಯಗಳಿಂದ ತತ್ತರಿಸುತ್ತಿದೆ. ಅದರ ಬಿಸಿ ಈ ಮೂರುಲೋಕಗಳಿಗೂ ತಟ್ಟಿಲ್ಲವೆಂದರೇನು? ತ್ರಿಮೂರ್ತಿಗಳೂ ಅವುಗಳಿಂದ ಹೊರತಾಗಲಿಲ್ಲವೆಂದರೇನು? ಈಗ ಪರೀಕ್ಷೆಗೆ ಉಳಿದಿರುವವನು ಮಹಾವಿಷ್ಣು ಒಬ್ಬನೇ. ಈ ಸಮಯದಲ್ಲಿ ಅದೇನು ಧ್ಯಾನದಲ್ಲಿರುವನೋ. ಹೀಗೇ ಚಿಂತಿಸುತ್ತ ಭೃಗು ಮಹರ್ಷಿಯು ದಾವಾನಿಲದಂತೆ ಯಾರಿಗೂ ಬೆದರದೇ ವೈಕುಂಠದ ದ್ವಾರಗಳನ್ನೆಲ್ಲ ದಾಟಿ ಬಂದನು. ಶೇಷಶಯನನ ಶಯ್ಯಾಗೃಹವನ್ನು ಪ್ರವೇಶಿಸಿದ್ದನು.
ನೋಡುತ್ತಾನೆ! ಇಡೀ ಜಗತ್ತಿನಲ್ಲಿ ಅಸುರೀ ಶಕ್ತಿಗಳ ದ್ಯೋತಕವಾಗಿಯೆ ಸಾತ್ವಿಕ-ಜನಸಾಮಾನ್ಯರು ಪಡಬಾರದ ಕಷ್ಟಗಳನ್ನು ಪಡುತ್ತಿದ್ದಾರೆ. ಸುತ್ತೆಲ್ಲ ಪರಿಸರನಾಶ, ಜನರ ನಡುವೆ ಕಲುಷಿತ ವಾತಾವರಣವೇರ್ಪಟ್ಟಿದೆ. ಇಲ್ಲಿ ಲೋಕಪಾಲಕನೂ ದೀನ ರಕ್ಷಕನೂ ಆದ ಸರ್ವೇಶನಿಗೆ(ಯೋಗ?)ನಿದ್ರೆಯೆ; ದಿವ್ಯ ನಿರ್ಲಕ್ಷ್ಯದ ನಗೆಯೇ. ಛೇ,ಇದೇನೀ ಪರಿಹಾಸವು! ಭೃಗುವಿನ ಮೈನರ-ನರಗಳೆಲ್ಲವೂ ಸೆಟೆದುಕೊಂಡವು. ಈ ಜಗದೋದ್ದಾರಕನು ಜಾಗತಿಕ ಜಗತ್ತಿಗಾಗಿ ಮಾಡುವುದೇನೂ ಉಳಿದಿಲ್ಲವೇ?
ಆ ಘಳಿಗೆಯಲ್ಲಿ ಆ ಭೃಗುವು ಭೃಗುವಾಗಿರಲಿಲ್ಲ;ಅನಿತ್ಯವೂ ಅಲೌಕಿಕವೂ ಆದ ಒಂದು ಅಮೋಘ ಪ್ರೇರಣೆಯಿಂದ ಒಡಗೂಡಿದವನೇ,
“ಓಹ್, ಎಲ್ಲಿ ಹೋಯಿತು;ಜಗತ್ ಕಲ್ಯಾಣ ಶಕ್ತಿ? ಈ ಶ್ರೀಹರಿಯ ಹೃದಯದಲ್ಲಿ ಅಡಗಿಕುಳಿತಿರುವುದೋ....” ಎಂಬ ಚೀತ್ಕಾರದೊಂದಿಗೇ ತನಗರಿವಿಲ್ಲದವನಂತೆಯೆ, ಭೃಗುವು ತನ್ನ ಬಲಗಾಲಿನಿಂದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದೆದನು.
ಆ ಕ್ಷಣದಲ್ಲಿ ಪತಿದೇವನಿಗೆ ಕಾಲೊತ್ತುತ್ತಲಿದ್ದ ಮಹಾಲಕ್ಷ್ಮಿಯು ದಿಗ್ಗನೆದ್ದು, ದಿಗ್ಬ್ರಾಂತಳಾದಳು. ಎದ್ದು ನಿಂತ ಮಹಾವಿಷ್ಣುವು ಏನೂ ಆಗದವನಂತೆಯೆ ಪ್ರಶಾಂತ ಚಿತ್ತನಾಗಿಯೆ ಇದ್ದನು! ಅಷ್ಟೇ ಅಲ್ಲ; ವಿನಯದಿಂದ ಬಾಗಿ ಆ ಬ್ರಹ್ಮರ್ಷಿಗೆ ವಂದಿಸಿದನು.
ಮಹಾಲಕ್ಷ್ಮಿಯು ಸುಮ್ಮನಾಗಲಿಲ್ಲ; ತಾನು ಪ್ರಾಣವನ್ನೇ ಇಟ್ಟಿರುವ ತನ್ನ ಸ್ವಾಮಿಯ ವಕ್ಷಸ್ಥಳಕ್ಕೆ ಪಾದಾಘಾತವಾದುದನ್ನು ಸಹಿಸದಾದಳು.
“ಸ್ವಾಮೀ, ಏನಿದೇ ಅಪಚಾರ? ಈತನು ಬ್ರಾಹ್ಮಣನೂ ತಪಸ್ವಿಯೂ ಬ್ರಹ್ಮಜ್ಞಾನಿಯೂ ಆದರೇನು? ನೀವು ಈತನ ದುಷ್ಕೃತ್ಯವನ್ನು ಮನ್ನಿಸಿ ವಂದಿಸುವುದೆಂದರೇನು? ಹ್ಞೂಂ, ಮೂರುಲೋಕಗಳೂ ನಿಮ್ಮ ತಾಳ್ಮೆಯನ್ನೇ ದೌರ್ಬಲ್ಯವೆಂದು ತಿಳಿದೀತು. ನನ್ನ ಹೃದಯ ವಲ್ಲಭರು ನೀವು. ನಾನು ಇದನ್ನು ಹೇಗೆ ಸಹಿಸಲಿ ಸ್ವಾಮಿ.” ಮಹಾಲಕ್ಷ್ಮಿ ಕನಲಿದಳು.
“ಪ್ರಿಯೆ, ಈ ಸ್ವರ್ಗದ ಸತ್ ಸಂಪ್ರದಾಯವೂ ನೀತಿ ಪ್ರಸಾರವು ಭಕ್ತರೊಡನೆ ನನ್ನ ಸಂಬಂಧವೂ ನಿನಗೇ ಅರ್ಥವಾಗದೇನು? ಸುಮ್ಮನೆ ಕೋಪಿಸಿಕೊಂಡರೆ ಹೇಗೆ? ಕೆಲ ಸಂದರ್ಭದಲ್ಲಿ ವರ್ತನೆಯಂತೆಯೆ ಭಕ್ತನ ಇಚ್ಛೆಯೂ ಇರಲಾರದಲ್ಲ....? ಶಾಂತಳಾಗು ದೇವಿ”
ಮಹಾವಿಷ್ಣುವು ಸಮಾಧಾನಿಸಿದರೂ ಲಕ್ಷ್ಮಿಯು ಪ್ರಸನ್ನಳಾಗಲಿಲ್ಲ.
“ಸ್ವಾಮಿ, ನಿಮ್ಮ ಸಹೃದಯವನ್ನು ಸದ್ಗುಣವನ್ನೂ ತಿಳಿಯದೇ ಮಾಡಿದ ಅಪಚಾರವೇ ಇದು?”
“ದೇವಿ, ಲೋಕದಲ್ಲಿ ಹೀಗೆ ನಡೆಯುವುದರಲ್ಲೂ ಕಾರ್ಯಕಾರಣ ಸಂಬಂಧವಿರುವುದು. ಅದು ನಿನಗೆ ತಿಳಿಯದೇನು?”
“ಸ್ವಾಮಿ, ನೀವು ಏನೆ ಹೇಳಿ, ನಾನು ಇದನ್ನು ಸಹಿಸಲಾರೆ. ನಿಮಗೆ ಅಪಚಾರವಾದೆಡೆ ಕ್ಷಣವೂ ಇರಲಾರೆ. .. ಅಲ್ಲ, ತ್ರಿಮೂರ್ತಿಗಳಲ್ಲಿ ಯಾರು ಸಾತ್ವಿಕ ಶಕ್ತಿಯ ಹಿರಿಮೆ ತೋರಬಲ್ಲರೆಂಬುದನ್ನು ಪರೀಕ್ಷಿಲು, ತಾನೆ ಮಹಾಸಮರ್ಥನೆಂದು ಬೀಗುತ್ತ ಬಂದ ಈ ಭೃಗುವು ನಿಮ್ಮ ವಕ್ಷಸ್ಥಳಕ್ಕೆ ಒದೆಯುವುದೆಂದರೇನು? ಪರೀಕ್ಷಿಲು ಬೇರೆ ರೀತಿ ನೀತಿಯೊಂದು ಇರಬೇಡವೇ...? “
“ಪ್ರಿಯೆ, ಆತ ಹಾಗೆ ಮಾಡಬೇಕೆಂಬುದೇ ವಿಧಿನಿಯಮವಾಗಿರುವಾಗ ತಡೆಯಲು ನಾವ್ಯಾರು ಹೇಳು..?”
“ಇಲ್ಲ ಪ್ರಭು ನಾನು ಸುಮ್ಮನೆ ಬಿಡಲಾರೆ, ಇಂದಿನಿಂದ ಭೂಲೋಕದಲ್ಲಿ ಇಂಥ ದುರಹಂಕಾರೀ ಬ್ರಾಹ್ಮಣ ಪ್ರಜ್ಞರಾರೇ ಇರಲಿ, ಅವರು ತಮ್ಮ ಬ್ರಹ್ಮ ತೇಜಸ್ಸನ್ನು ಕಳೆದುಕೊಳ್ಳಲಿ. ಹೀಗೆ ತಮ್ಮ ಸ್ವಯಂಕೃತಾಪರಾಧದಿಂದಲೇ ಸ್ವತಃ ನೋವು ಅವಮಾನ ಅನುಭವಿಸತ್ತ, ತಾವು ಕಲಿತ ವಿದ್ಯೆಯನ್ನು ಕೇವಲ ಧನದಾಸೆಗಾಗಿಯೆ ಮಾರಿಕೊಂಡು ಜೀವಿಸುವಂತಾಗಲಿ” ಎಂದು ಶಪಿಸಿದಳಾ ಮಹಾಲಕ್ಷ್ಮಿಯು, ಸರಸರನೆ ವೈಕುಂಠದಿಂದ ಹೊರಟೇ ಬಿಟ್ಟಳು.
ಮಹಾವಿಷ್ಣುವು “ದೇವಿ, ಹೋಗ ಬೇಡ ನಿಲ್ಲು; ದೇವಿ ಶಾಂತಳಾಗು” ಎಂದು ಪರಿಪರಿಯಾಗಿ ಕೇಳಿಕೊಂಡರೂ ನಿಲ್ಲಲಾರದಾದಳು ಆಕೆ.
ಭೃಗುಮಹರ್ಷಿಯು ಅದಾಗಲೆ ದಿಗ್ಮೂಢನೆ ಆಗಿಬಿಟ್ಟಿದ್ದಾನೆ! ಗರುಡಗಂಭದಂತೆ ನಿಂತಿದ್ದಾನೆ! ಅವನ ಕಂಗಳಲ್ಲಿ ಕ್ರೋಧಾಗ್ನಿ ಇಳಿ ಮುಖವಾಗತೊಡಗಿದೆ..
“ಓ ಮಹಾತಪಸ್ವಿಯೆ, ಶಾಂತನಾಗು, ನನ್ನ ವಜ್ರಕಾಯಕ್ಕೆ ತಗುಲಿದ ನಿಮ್ಮ ಮೃದು ಪಾದಕ್ಕೆಷ್ಟು ನೋವಾಯಿತೋ..” ಎಂದು ಆತನ ಪಾದಗಳನ್ನು ಹಿಡಿದನು.ಈ ದಿನ ವೈಕುಂಠವು ಪಾವನವಾಯಿತು. ಇಲ್ಲಿ ಎಲ್ಲರ ಮೋಕ್ಷಲಕ್ಷ್ಮಿಯೆ ಅವತರಿಸಿದ್ದಾಳೆ...” ಎಂದು ನಸುನಗೆಯಲ್ಲೇ ಮಹಾವಿಷ್ಣವು ಹೇಳುತ್ತಲೇ ಮೆಲ್ಲನೆ ಭೃಗುವಿನ ಬಲಗಾಲಿನ ಜ್ಞಾನನೇತ್ರವನ್ನು ಚಿವುಟಿಹಾಕಿಬಿಟ್ಟಿದ್ದನು.
ಮಹಾವಿಷ್ಣವು ಭೃಗುವಿನ ಕಾಲು ಹಿಡಿದಾಗಲೆ ಮತ್ತೆ ಮಹಾಲಕ್ಷ್ಮಿಯು ಹಿಂದಿರುಗಿ ನೋಡದೇನೆ ವೈಕುಂಠವನ್ನು ತೊರೆದು ಹೊರಟೇ ಹೋಗಿದ್ದಳು.
“ಓ... ಹಾಯ್, ಶ್ರೀಹರಿ ಜಗತ್ ರಕ್ಷಕನೇ ಕಾಪಾಡು...” ತನ್ನ ಜ್ಞಾನನೇತ್ರವನ್ನು(ಅಲ್ಲ ಅಹಂಭಾವದ ನೇತ್ರವನ್ನು) ಕಳೆದುಕೊಂಡಾಕ್ಷಣವೆ ಭೃಗುವು ಗರ್ವಭಂಗ ಹೊಂದಿದನು; ನೋವಿನಿಂದ ನರಳಿದನು.
“ಓಹ್, ಮಹಾನ್ ಸಿದ್ಧಿಪುರುಷನೆ ನೀನು ಬಂದ ಕಾರ್ಯ ಈಗ ಕೈಗೂಡಿತೇ....” ಹೀಗೆ ಶಾಂತಮೂರ್ತಿಯಾಗಿ ಮಹಾವಿಷ್ಣುವು ಕೇಳಿದಾಗ,
ತನ್ನೊಳಗಿನ ರಜೋ ಮತ್ತು ತಮೋಗುಣಗಳ ಮೂಲ ಬೇರನ್ನೇ ಚಿವುಟಿಸಿಕೊಂಡಿದ್ದ ಭೃಗುಮಹರ್ಷಿಯ ಎರಡೂ ಕಣ್ಣಗಳು ಇದೀಗ ತುಂಬಿ ಬಂದಿದ್ದವು. ಹೊಳೆಯತೊಡಗಿದವು.
“ಹೇ! ಶ್ರೀಹರಿ, ನಿನ್ನನ್ನು ಪರೀಕ್ಷಿಸಲೆಂದೇ ಬಂದು ನಾನೇ ಸತಃ ಸತ್ವಪರೀಕ್ಷೆಗೊಳಗಾದೆ;ಪರಿಶುದ್ಧನಾದೆ. ಆದರೆ, ಓ ದೇವ, ನಿನ್ನನ್ನೇ ಧರ್ಮಸಂಕಟದಲ್ಲಿ ಸಿಲುಕಿಸಿಬಿಟ್ಟೆ... ಶ್ರೀಲಕ್ಷ್ಮಿಯನ್ನೆ ನಿನ್ನಿಂದ ಅಗಲಿಸಿದ ಹೀನ ಕಾರ್ಯ ಜರುಗಿಹೋಯಿತೇ ನನ್ನಿಂದ... ನನ್ನನ್ನು ಕ್ಷಮಿಸಿ ಬಿಡು ಓ ಕೃಪಾಳು ಎಂದು ಹೇಗೆ ತಾನೆ ಕೇಳಲಿ...?”ಭಗವು ಎರಡು ಕೈಗಳನ್ನು ಜೋಡಿಸಿ ಅತ್ಯಂತ ಕಳಕಳಿಯಿಂದ ಪ್ರಾರ್ಥಿಸಿ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದನು.
“ಭೃಗು ಋಷಿ, ಇದೆಲ್ಲವೂ ಒಂದು ಸತ್ ಸಂಕಲ್ಪ-ಸಂದೇಶ ಸಾರಲಿಕ್ಕಾಗಿಯೆ ಜರುಗಿದೆಯೆಂದು ತಿಳಿ. ನನಗೆ ಒಂದೊಂದು ಅವತಾರ ವಿಶೇಷಗಳಲ್ಲೂ ಸಂಕಟಗಳು ಇದ್ದದ್ದೇ ತಾನೆ” ಮಹಾವಿಷ್ಣುವು ಮತ್ತೆ ನಗೆಬೀರಿದನು.
“ಓ ದೇವ ದೇವ! ಜಗನ್ನಿಯಾಮಕ, ನಾವು ಋಷಿಗಳೆಲ್ಲರೂ ಭೂಲೋಕದಲ್ಲಿ ಲೋಕಕಲ್ಯಾಣಾರ್ಥವಾಗಿಯೆ ಒಂದು ಮಹಾಯಜ್ಞವನ್ನು ಮಾಡುತ್ತಿರುವೆವು. ಅದು ಸರ್ವಾಂತರ್ಯಾಮಿಯಾದ ನಿನಗೆ ತಿಳಿಯದೇ... ಆ ಯಜ್ಞಫಲವನ್ನು ಓ ಸಾತ್ವಿಕ ಪ್ರಭುವೆ, ನಿನಗೇ ಅರ್ಪಣೆ ಮಾಡಲಿದ್ದೇವೆ. ನೀನು ದಯಮಾಡಿಸಬೇಕು” ಎಂದು ಭೃಗುಮಹರ್ಷಿಯು ವಿನಮ್ರತೆಯಿಂದ ಬೇಡಿಕೊಂಡನು.
ಹಸನ್ಮುಖನಾಗಿ ಅರ್ಥಗರ್ಭಿತನೋಟವೊಂದನ್ನು ಬೀರಿದ ಮಹಾವಿಷ್ಟುವು ಹೀಗೆ ಹೇಳಿದನು-
“ಹಾಗೇ ಆಗಲಿ ಮಹರ್ಷಿ! ಆದರೆ, ನೀವು ಋಷಿಗಳೆಲ್ಲರೂ ಸೇರಿ ತ್ಯಾಗಭಾವನೆಯಿಂದಲೆ ಪ್ರದಾನ ಮಾಡಲಿರುವ ಯಜ್ಞಫಲವು ಜಗದೊಡಲಲಿರುವ ಏಕೈಕ ಸಾತ್ವಿಕಶಕ್ತಿಗೇ ಸೇರುವುದೆಂಬುದನ್ನು ಮರೆಯದಿರಿ. ಅಂತಹ ಸಾತ್ವಿಕ ಸಂಕಲ್ಪದ ಹಿಂದೆ ನಾನು ಮಾತ್ರವಲ್ಲ ಪರಶಿವ-ಪರಬ್ರಹ್ಮರೂ ಕೂಡ ಸದಾ ಇರುವರು. ಅಂತಹ ಯಾವುದೇ ಸದುದ್ದೇಶಯುತವಾದ ಕಾರ್ಯಗಳು ಸತತವಾಗಿ ಸಾಗಲಿ.”
ಹೀಗೆ ಮಹಾವಿಷ್ಣವು, ಭೃಗುಋಷಿಗೆ ಜಗದೈಕ ಅಸ್ತಿತ್ವಶಕ್ತಿಯ ದರ್ಶನಮಾಡಿಸಿ,ಆಶೀರ್ವದಿಸಿದನು. ಮುಂದೆ ಭೂಲೋಕದಲ್ಲಿ ನಡೆಯಲಿರುವ ಯಜ್ಞಕ್ಕೆ ಮಹಾ ಸಂದೇಶವೊಂದನ್ನೂ ನೀಡಿ ಕಳುಹಿಸಿಕೊಟ್ಟನು.
-ಎಚ್.ಶಿವರಾಂ 8 ಸೆಪ್ಟೆಂಬರ್, 2006