ಮಂಗಳವಾರ, ಆಗಸ್ಟ್ 5, 2014

ಶ್ರೀನಿವಾಸ ಕಲ್ಯಾಣ ಕಥನ- ಪುನಾರಚನೆಯಲ್ಲಿ.....

  • ೧೯೯೭ ರಲ್ಲಿ ಪ್ರಕಟವಾದ ನನ್ನ ಕೃತಿ “ಸಪ್ತಗಿರಿ ಸಂಪದ” ಪೌರಾಣಿಕ ಕಾದಂಬರಿ. ಅದರ ವಿಸ್ತೃತ ಹೊಸ ಆವೃತಿಯೇ  “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ” . 
  • ಕಲಿಯುಗಾರಂಭ ಕಾಲವೆಂದರೆ, ವೇದಕಾಲ. ಶ್ರೀ ವೆಂಕಟೇಶ ಪುರಾಣಕಥೆ ಅಥವಾ ಶ್ರೀನಿವಾಸ ಕಲ್ಯಾಣಕಥೆ, ವೇದಕಾಲೀನ ಭಾರತದ ಭವಿಷ್ಯೋತ್ತರ ಪುರಾಣ ಕಥೆ.
  • ಹಿಂದಿನ ದ್ವಾಪರಯುಗದಲ್ಲಿ ಶ್ರೀಕೃಷ್ಣ ಮಹಾಭಾರತದ ಭಗವದ್ಗೀತೆಯಲ್ಲಿ ಅರ್ಜುನನಿಗೆ ರಜೋಗುಣ, ತಮೋಗುಣ ಮತ್ತು ಸತ್ವಗುಣಗಳ ಬಗ್ಗೆ ನೀಡುವ ವಿಶ್ಲೇಷಣೆಯನ್ನೇ ಕಥಾರೂಪದಲ್ಲಿ ಹೇಳುವುದೇ "ಶ್ರೀನಿವಾಸ ಕಲ್ಯಾಣ ಕಥನ".
  • ವಿಶ್ವಸೃಷ್ಟಿಯಲ್ಲಿ ಎರಡುಪಾಲು ರಜಸ್ಸು ಮತ್ತು ತಮಸ್ಸು ಇವುಗಳೊಡನೆ ಒಂದುಪಾಲು ಸತ್ವ ಇದೆ. ಇವು ಮೂರೂ ಗುಣಗಳೊಡನೆ ನಮ್ಮ ಮನಸ್ಸು ಇರುತ್ತದೆ. ಯಾವಾಗಲೂ ಸತ್ವಗುಣ-ಸತ್ ಶಕ್ತಿಯಿಂದಲೇ ರಜೋ ಮತ್ತು ತಮೋಗುಣಗಳ ಸಂಘರ್ಷವು ನಿಗ್ರಹವಾಗುತ್ತದೆ. ಆಗುತ್ತಿರಬೇಕು. ಅದೇ ಜಗದ ಸಮತೋಲನಕ್ಕೆ ಹಾಗೂ ಜಗದೇಕ ಅಸ್ತಿತ್ವಕ್ಕೆ ಕಾರಣೀಭೂತವಾಗಿರುತ್ತದೆ. ಇದನ್ನು ವರಾಹಾವತಾರದಲ್ಲಿ ನೋಡಬಹದಾಗಿದೆ.
  • ೧. ಸತ್ವಗುಣವೆಂದರೆ- ಶಾಂತಿ, ಸಮಾಧಾನ, , ಸಂತೃಪ್ತಿ,  ಜ್ಞಾನ-ವಿಶೇ಼ಷಜ್ಞಾನ ಪೂರ್ಣತ್ವದಲ್ಲಿ ಸುಪ್ರಕಾಶ.
  •  ೨. ರಜೋಗುಣವೆಂದರೆ- ಆವೇಶ, ಆಕ್ರೋಶ, ಕೋಪ, ಪ್ರಕೋಪ, ಅನರ್ಥ ಅವಿವೇಕ
  • ೩. ತಮೋಗುಣವೆಂದರೆ- ಅಂಧಕಾರ, ಅಜ್ಞಾನ, ಅಪವೃತ್ತಿ, ವಿಕೃತಿ, ಅವಿವೇಕ, ಅಪ್ರವೃತ್ತಿ, ಅನಾಚಾರ, ಹಿಂಸೆ, ಕ್ರೌರ್ಯ..
  • ಇವು ಮೂರೂ ಗುಣಗಳು ಮನುಷ್ಯ, ಪ್ರಾಣಿ, ಸಸ್ಯ, ಭೂಮಿ, ಜಲಚರಗಳಲ್ಲಿ ಇರುತ್ತವೆ. ಇರಲೇಬೇಕಾದುದು ಸೃಷ್ಟಿನಿಯಮ. ಇವುಗಳಲ್ಲಿ ಮೊದಲನೆಯದಾದ ಸತ್ವಗುಣದಿಂದಲೇ ನಮ್ಮ ಇನ್ನೆರಡು ಗುಣಗಳ ನಿಯಂತ್ರಣ. ಅಂದರೆ, ಮೇಲಿನ ಮೂರೂಗುಣಗಳು ಮನಷ್ಯನ ಇಂದ್ರಿಯಗಳ ಮೇಲೆ ಜೀವಿತದುದ್ದಕ್ಕೂ ಪ್ರಭಾವ ಬೀರುತ್ತಲೇ ಇರುತ್ತವೆ. ಅವುಗಳನ್ನು ನಿಗ್ರಹಿಸುವುದೇ ಅವುಗಳಲ್ಲೇ ಒಂದಾಗಿರುವ ಸತ್ವಗುಣದಿಂದಲೇ. ಆ ಸತ್ ಶಕ್ತಿಯಿಂದಲೇ.
  • ಇವು ಮೂರೂ ಗುಣಗಳ ಹಿಡಿತದಲ್ಲಿದೆ ಮನುಷ್ಯನ ಇಂದ್ರಿಯ ಕಲ್ಯಾಣ.  ಪುರುಷಾರ್ಥಗಳಲ್ಲಿ ಒಂದಾದ ಕಾಮವೂ ಸತ್ವಗುಣದಿಂದಲೇ ಉದ್ದೀಪನೆಯಾಗುವುದಾದರೆ, ಎಲ್ಲರಲ್ಲೂ ಇಂದ್ರಿಯಕಲ್ಯಾಣ ಭಾವನೆಯೇ ಉಂಟಾಗುತ್ತದೆ. ಅದುವೇ ಧೀರ್ಘಾಯುಷ್ಯಕ್ಕೆ, ಆತ್ಮೋನ್ನತಿ. ಮೋಕ್ಷಕ್ಕೆ ಮಾರ್ಗವಾಗುತ್ತದೆ.
  • ಶ್ರೀನಿವಾಸ ಕಲ್ಯಾಣ ಕಥನದಲ್ಲಿ ಮೂರುಲೋಕಗಳಿಗಷ್ಟೇ ಸೀಮಿತವೆನಿಸಿಬಿಡುವ ಸತ್ವಗುಣದ ಹಿರಿಮೆಯನ್ನು ನಾವು ಪುಟಪುಟಗಳಲ್ಲೂ ನೋಡಲು ಸಾಧ್ಯವಿದೆ. ಅದನ್ನು ನಿರೂಪಣೆಯಲ್ಲಿ ಸಾದರಪಡಿಸುವುದೇ
  • "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ”
  • ಸತ್ವಗುಣದ ಹಿರಿಮೆಯೆಂದರೆ, ಸಭ್ಯಜೀವನ. ಸಭ್ಯನ ಜೀವನದಲ್ಲಿ ಮೊದಲನೆಯ ಸಂಸ್ಕಾರವೇ ವಿವಾಹ ಸಂಸ್ಕಾರ. ಅಂದರೆ, ಸಭ್ಯ ಗೃಹಸ್ಥಾಶ್ರಮ ಧರ್ಮ ಸ್ವೀಕಾರವೇ ಮನುಷ್ಯರಿಗೆ ಶ್ರೇಷ್ಠ. ವಿಶ್ವಜೀವನಲ್ಲಿ ಗಂಡು ಹೆಣ್ಣಿನ ಪ್ರೀತಿ-ಪ್ರೇಮ ಮತ್ತು ಅನುರಾಗ ಬಂಧನ ಇವುಗಳು ಅರ್ಥಪೂರ್ಣವಾಗುವುದೇ ವಿಶ್ವಜೀವನದಲ್ಲಿ ವಿವಾಹಜೀವನಾದರ್ಶದಲ್ಲಿ.  ವಿವಾಹಜೀವನದ ಪ್ರಾಮುಖ್ಯತೆಯೆ ದಾಂಪತ್ಯ ನೀತಿ.
  • ವಾಸ್ತವಿಕ, ತಾತ್ವಿಕ ಹಾಗೂ ವೈಜ್ಞಾನಿಕವಾಗಿ  ಕೌಟುಂಬಿಕ, ಸಾಮಾಜಿಕ ನೆಲೆಯಲ್ಲಿ ವಿಮರ್ಶಾತ್ಮಕವಾಗಿ ಪುನಾರಚನೆಯಲ್ಲಿ ಮೂಲಕಥೆಗೆ ಚ್ಯುತಿ ಬಾರದಂತೆ “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ” ತಿಳಿಸುತ್ತದೆ ಎಂದರೆ ಅದು ಅಚ್ಚರಿಯೇ; ಆ ದೇವ ದೇವನ ಕೃಪೆಯೇ ಎನ್ನಬೇಕಷ್ಟೆ. 
  • ಅಂತೆಯೆ, ವಿವಾಹಜೀವನವೇ ಮನುಷ್ಯನಿಗೆ ಆರೋಗ್ಯಕರವಾದ ಬದುಕು ಭವಿಷ್ಯಕ್ಕೆ ಪೂರಕ ಹಾಗೂ ಜೀವಿತ ಸಾರ್ಥಕ್ಯವೆನಿಸುವುದು.  ಇದನ್ನು ಕಥಾರೂಪದಲ್ಲಿ ನಿವೇದಿಸುವುದೇ ಶ್ರೀನಿವಾಸ ಕಲ್ಯಾಣ. ಅದರ ಪುನಾರಚನೆಯಲ್ಲಿ ಅಮೂರ್ತವಾಗಿರುವ ಮೌಲಿಕ ಪರಿಕಲ್ಪನೆಗಳು ಕಥಾಸಂವಿಧಾನ, ಸಂಭಾಷಣೆಯಲ್ಲಿ ಥೆಯ ಉದ್ದಕ್ಕೂ ಮೂರ್ತವಾಗುತ್ತಾ ಅನಾವರಣಗೊಳ್ಳುವುದನ್ನು “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚದಲ್ಲಿ” ಕಾಣಬಹುದಾಗಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ