ಶನಿವಾರ, ಆಗಸ್ಟ್ 9, 2014

ಬ್ರಹ್ಮನಿಗೂ ಭವಲೋಕದ(ಭೂಲೋಕದ) ಚಿಂತೆ-೨


ಇದೇನು ತ್ರಿಗುಣಾತ್ಮಕ ಪ್ರಪಂಚದ ಮಾಯೆಯೋ...ಯುಗಯುಗಳಲ್ಲಿ ಆಗುವ ಪರಿವರ್ತನೆಗೆ ನಾಂದಿಯೋ...  ಓಹ್, ಕಲಿಯುಗದಲ್ಲಿ ಸಹಸ್ರ ವರ್ಷಗಳಿಗೊಮ್ಮೆ ಪಾದಪಾದಗಳಲ್ಲಿ ಧರ್ಮವು ಕುಸಿಯುವುದೂ ಜಗನ್ನಿಯಾಮಕವೇ ಆದರೂ  ಎಂದಿಗಾದರೂ ತ್ರಿಗುಣಗಳು ಸಪ್ರಮಾಣದಲ್ಲಿ ಇರಲೇಬೇಕಲ್ಲ...
ಸಜ್ಜನ ಸಂಖ್ಯೆಯೇ ಕ್ಷೀಣಿಸಿಬಿಟ್ಟರೆ ಸತ್ ಶಕ್ತಿಯೇ ಕಳಾಹೀನವಾದರೆ ಮುಂದೆ ಹೇಗೆ....? ಆಗುವುದೇನಿದ್ದರೂ ಅಕಾಲದಲ್ಲಿ ಆಗಬಾರದಷ್ಟೇ. ಯುಗಪರಿವರ್ತನೆಗೂ ಬಲವತ್ತರವಾದ ಕಾರಣಗಳಿರುವುದೇ ಆದರೇನು! ಅದು ಆಗುವ ಕಾಲಕ್ಕೇ ಆಗಬೇಕಲ್ಲ... ಅತಿ ವೇಗಗತಿಯಲ್ಲಿ ವೈಜ್ಞಾನಿಕವಾಗಿ ಮುಂದುವರೆದಿರುವ ಈ ಕಲಿಯುಗವು  ವಿಶೇಷ ಯುಗವಾಗದೇನೆ ಅಷ್ಟೇ ವೇಗಗತಿಯಲ್ಲಿ ಅವನತಿ ತಂದುಕೊಳ್ಳಬಾರದಲ್ಲ....
ಸತ್ಯ ಲೋಕದಲ್ಲಿ ಗಂಭೀರ ಮೌನವೇ ನೆಲೆಸಿದೆ. ಇಂದ್ರಾದಿ ದೇವತೆಗಳು ತವಕದಿಂದ ಇದ್ದಾರೆ. ಅಷ್ಟ ದಿಕ್ಪಾಲಕರು ತಲ್ಲಣಿಸಿದ್ದಾರೆ. ಸಪ್ತ ಋಷಿಗಳು ದಿಗ್ಮೂಢರಂತಾಗಿದ್ದಾರೆ. ಪದ್ಮಾಸನದಲ್ಲಿದ್ದ ಬ್ರಹ್ಮದೇವ ಸುಪ್ರಸನ್ನಃ ನಾಗಲಿಲ್ಲ. ಅವನ "ಚಿತ್" ಅನಿತ್ಯದತ್ತ ಪಯಣಿಸಿದೆ. ಅಲ್ಲೇಲ್ಲೋ ಸತ್ ಶೋಧನಗೆ ತೊಡಗಿದೆ.

ಎಲ್ಲರೂ  ಜಗಜ್ಜನನಿ ಸರಸ್ವತಿ ದೇವಿಗೇ ಮೊರೆ ಇಟ್ಟಿದ್ದಾರೆ....

ಮೌನ ಮುರಿದ ಸರಸ್ವತಿ ದೇವಿ ತನ್ನ ಪತಿ ಬ್ರಹ್ಮದೇವರಿಗೆ ಮೆಲ್ಲನೆ ಕೇಳಿದ್ದಾಳೆ....

"ಸ್ವಾಮಿ, ಪ್ರಸನ್ನ ಚಿತ್ತರಾಗಬಾರದೇ ? ನಿಮ್ಮ ಅಂತರಂಗದ ಹೋರಾಟಕ್ಕೆ ನಿಮ್ಮ ಶೃತಿ ಸೂತ್ರಗಳು ಉತ್ತರಿಸದಿರುವುದೂ ಇದೆಯೇನು...?"
"ದೇವಿ, ಧರ್ಮಜಿಜ್ಞಾಸೆಯಲ್ಲಿ ಶ್ರುತಿಗಳೇ ಪ್ರಮಾಣ. ಬ್ರಹ್ಮ ಜಿಜ್ಞಾಸೆಯಲ್ಲಿ ಶ್ರುತಿಗಳ ಜೊತೆಗೆ ಅನುಭವವೂ ಪ್ರಮಾಣ. ಬ್ರಹ್ಮತತ್ವವು ಭೂತ ವಸ್ತುವಾಗಿದೆ. ಅಲ್ಲಿ ವಸ್ತುತಂತ್ರವಿದೆ. ಅದರ ಮೇಲೆ ಪುರುಷ ತಂತ್ರದ ಕೈವಾಡವಿದೆ" ಬ್ರಹ್ಮ ದೇವ ಹೇಳಿದನು.

"ಸ್ವಾಮಿ, ಪ್ರಕೃತಿ-ಪುರುಷ ವ್ಯಾಪಾರ ಕ್ಷೇತ್ರವೇ ಜಗತ್ತು ಅಲ್ಲವೇ? ಅಲ್ಲಿ ಏನೆಲ್ಲ ತಾಂತ್ರಿಕತೆಯಲ್ಲೂ ತತ್ವಾನುಭವವೇ ಕಡೆಗೆ ಪಾಠ ಕಲಿಸುವುದಲ್ಲವೇ..?"

"ನೋಡು, ಜಗತ್ತು ನಿಲ್ಲದೇ ನಡೆಯುತ್ತಿರುವುದು. ಅಂದರೆ, ಜಗತ್ತು ಓಡುತ್ತಿದೆ. ಪರಿವರ್ತನೆ ಜಗದ ನಿಯಮ. ಅದು ಪ್ರಾಕೃತಿಕವಲ್ಲದೇ ಮಾನವ ನಿರ್ಮಿತವೂ ಆಗಿರುತ್ತದೆ. ಮನುಷ್ಯ ರಾಗದ್ವೇಷಗಳನ್ನು ಜಯಿಸಿದಾಗಲೇ ಅವನ ಪುರುಷತಂತ್ರವು ಸತ್ವಪೂರ್ಣವಾಗುತ್ತದೆ."

"ಲೋಕಜೀವನದಲ್ಲಿ ಮನುಷ್ಯ ಧರ್ಮಬಾಹಿರನಾಗಬಾರದು. ಧರ್ಮದಲ್ಲಿ ನ್ಯಾಯ ನೀತಿ ಇದೆ. ಅದು ಎಲ್ಲರಿಗೂ ಒಂದೇ. ಧರ್ಮ ಇರುವಲ್ಲಿ ಸತ್ಯಸೌಂದರ್ಯವಿದೆ. ಧರ್ಮಕ್ಕೆ ತಲೆಬಾಗಿ ನಡೆದುಕೊಂಡರೆ, ಅಶಾಂತಿ ಎಂಬುದಿಲ್ಲ. ವಿಜ್ಞಾನ ತಂತ್ರಜ್ಞಾನದಲ್ಲಿ ಬೆಳೆಯಬಲ್ಲ ಮನುಷ್ಯನಿಗೆ ಇದು ತಿಳಿಯದೇ ಸ್ವಾಮಿ."

"ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ" ಅಂದರೆ, ಜಗತ್ತಲ್ಲ ನಿಂತಿರುವುದು ಧರ್ಮದಿಂದಲೇ. ಧರ್ಮವು ಬೂದಿ ಮುಚ್ಚಿದ ಕೆಂಡದಂತೇ ಇರುತ್ತದೆ. ಅದನ್ನು ಆಗಾಗ್ಗೆ ಕೆದಕುತ್ತ ಅಧರ್ಮವನ್ನು ಸುಡಬೇಕು. ಅದಕ್ಕಾಗಿ ಪುರುಷತಂತ್ರ ಇರಬೇಕು; ಇರುತ್ತದೆ. ಅಂತಹ ಧರ್ಮನಿಷ್ಠರಿಂದಲೇ ಪುರುಷತಂತ್ರವೂ ಪೌರುಷೇಯವಾಗುತ್ತದೆ" ಬ್ರಹ್ಮದೇವ ಹೇಳಿದನು.

"ಸ್ವಾಮಿ, ಪುರುಷ ತಂತ್ರವು ಪೌರುಷೇಯವಾಗುವುದೆಂದರೇನು!" ಕೇಳಿದಳು ಮಾತೆ ಸರಸ್ವತಿ.

"ಪ್ರಕೃತಿಯಲ್ಲಿ ಬದಲಾಗದಿರುವ ಗುಣಲಕ್ಷಣಗಳನ್ನು ಹೊಂದಿರುವ ವಸ್ತುಗಳಿವೆ. ಅವು ಭೂಮಿ, ನೀರು, ಅಗ್ನಿ, ಅರಣ್ಯ ಮುಂತಾದವುಗಳು. ಹಾಗೂ ನಮ್ಮ ದೇಹಪ್ರಕೃತಿ ಕೂಡ.  ಇವೆಲ್ಲ ವಸ್ತುತಂತ್ರ ಹೊಂದಿವೆ. ಮನುಷ್ಯ ಅವುಗಳ ಶಕ್ತಿ-ಸೌಂದರ್ಯವನ್ನು ಬೆಳಕಿಗೆ ತಂದು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ, ಅವನಿಂದ ವಸ್ತುತಂತ್ರವು ಪುರುಷತಂತ್ರವಾಗಿ ಪೌರುಷೇಯವಾಗುತ್ತವೆ. ಹಾಗಲ್ಲದೇ, ಕಾಮನೆ ಕಾಂಚಣಗಳಿಂದ ಅತಿಸುಖಲಾಲಸೆ ಲೋಭಗಳಿಂದ ಅವುಗಳ ಮೇಲೇ ದುರಾಕ್ರಮಣ ಮಾಡಿದರೆ ನಾಶಹೊಂದುತ್ತಾನೆ." ಬ್ರಹ್ಮ ಹೇಳಿದನು.

"ಯಾಕೆಂದರೆ, ಮನುಷ್ಯರಲ್ಲಿ ರಜೋಗುಣ ಮತ್ತು ತಮೋಗುಣ ಸ್ವಭಾವಗಳಿಂದ ಇಂದ್ರಿಯಗಳ ವಶವಾಗುವರೇ ಬಹಳವಲ್ಲವೇ ಸ್ವಾಮಿ. ಹಾಗಾಗಿ ಅವರು ಕಾಮ ಲೋಭ ಪೀಡಿತರಾಗುತ್ತಾರೆ." ಸರಸ್ವತಿ ನಸುನಕ್ಕು ನುಡಿದಳು.

"ಜಗತ್ತಿನ ಉಳಿವಿಗೆ ಪುರುಷತಂತ್ರವೂ ಮುಖ್ಯವಲ್ಲವೇ ದೇವಿ! ಅದು ಪೌರುಷೇಯ ವಾಗುತ್ತಿರಬೇಕಷ್ಟೇ. ಮನುಷ್ಯರಲ್ಲಿ ಮನಸ್ಸು ಇಂದ್ರಿಯಗಳ ವಶವಾಗದ ಹಾಗೆ ಪ್ರಜ್ಞಾವಂತಿಕೆ ಹಾಗೂ ಬುದ್ಧಿವಂತಿಕೆಯುಳ್ಳ ಸತ್ವಗುಣ ಸಾಧಕರಿಂದಲೇ ನಿಸರ್ಗದ ನಿಯಮಗಳು ಪೋಷಿಸಲ್ಪಡುತ್ತವೆ. ಅವರಲ್ಲಿ ಕೆಲ ವೈಜ್ಞಾನಿಕರೂ ಇರುವುದು ಸೋಜಿಗವೇ. ಆದರೆ, ಅವರೆಲ್ಲರ ಕಾರ್ಯಕ್ಕೆ ಭಂಗ ಉಂಟಾಗಬಾರದಲ್ಲ..." ಬ್ರಹ್ಮ ಗಂಭೀರವಾಗಿ ನುಡಿದನು.

"ಸ್ವಾಮಿ, ನೀವು ಸೃಷ್ಟಿವಿಧಾತರು. ಜಗತ್ತಿನಲ್ಲಿ ಸತ್ವಗುಣದ ಸಮತೋಲನವನ್ನು ಉಂಟುಮಾಡುವ ವಿಧಾನವನ್ನೂ ಬಲ್ಲವರಲ್ಲವೇ...? ಜಗಜ್ಜನನಿ ಸರಸ್ವತಿ ಅರ್ಥಗರ್ಭಿತ ನಗೆ ಬೀರಿದಳು.

"ಉಹ್ಞೂಂ, ಎಲ್ಲಬಲ್ಲವನು ನಾನೆಂಬುದೇ ತಪ್ಪು. ನನಗೆ ತಿಳಿದಿದೆ ಎಂದ ಮಾತ್ರಕ್ಕೆ ಅದು ನನ್ನಿಂದಲೇ ಸಾಧ್ಯವಾಗುವುದೆಂದು ಹೇಳಲಾಗದು ದೇವಿ."

"ಹಾಗಾದರೆ, ನೀವು ಚಿಂತಿಸುವುದಕ್ಕೇನಿದೆ ಹೇಳಿ..."

"ಮುಂದೇನು ಆಗಲಿದೆಯೋ ಅದರಲ್ಲಿ ನಾನೂ ಭಾಗಿಯೇ. ಅದು ಹೇಗೆಂಬುದು ನನಗೂ ತಿಳಿದಿಲ್ಲವೆಂದರೆ ನಿನಗೆ ಆಶ್ಚರ್ಯವಾದೀತು" ಬ್ರಹ್ಮದೇವ ನಸುನಕ್ಕನು.

"ಅರ್ಥವಾಯಿತು ಬಿಡಿ. ಮುಂದೆ ನಡೆಯುವುದೇನಿದ್ದರೂ ನಡೆದೇ ತಿರುತ್ತದೆ. ಅದರಲ್ಲಿ ನೀವೂ ಭಾಗಿಗಳೇ.. ಅಂದಮೇಲೆಆಗುವುದೆಲ್ಲ ಒಳ್ಳೆಯದಕ್ಕೇ ಅಲ್ಲವೇ...?" ಸರಸ್ವತಿ ದೇವಿ ಸಾಂತ್ವನಗೈದಳು.

ಅದೇ ಸಮಯಕ್ಕೆ ನಾರದರ ಪ್ರವೇಶವಾಯಿತು.

ನಾರದರು ದೇವರ್ಷಿಗಳು. ತ್ರಿಕಾಲಜ್ಞಾನಿಗಳು. ತ್ರಿಲೋಕ ಸಂಚಾರಿಗಳು. ಭೂತ ಭವಿಷ್ಯತ್ತುಗಳಿಗೆ ಭಾಷ್ಯ ಬರೆದವರು. ಬ್ರಹ್ಮನ ವರಪುತ್ರರು. ಎಲ್ಲ ದೈವಿಕ ಮತ್ತು ಪ್ರಾಪಂಚಿವಾದ ಪರಿವರ್ತನೆಗಳಲ್ಲಿ ಅವರ ಪಾತ್ರವು ಪ್ರಮುಖವಾದದ್ದು. ಪುರಾಣಕಥೆಗಳಲ್ಲಿ ಪ್ರಧಾನ ಸೂತ್ರ ಧಾರನದು. ಅವ್ಯಕ್ತ ಪ್ರೇರಣೆಯಲ್ಲಿ ಕೂಡಲೇ ಕಾರ್ಯೋನ್ಮುಖರಾಗುವರು. ಇದೀಗ ಬ್ರಹ್ಮನಿಗೆ ಅಭಿವಾದನ ಮಾಡಿದರು. ಮಾತೆ ಸರಸ್ವತಿಗೂ ಕೂಡ. ಬ್ರಹ್ಮದೇವನ ಗಾಂಭೀರ‍್ಯವು ಸಡಿಲಗೊಳ್ಳಲಿಲ್ಲ. ತಮ್ಮನ್ನು ಆದರಿಸಬೇಕೆಂದು ಅವರು ಅಪೇಕ್ಷಿಸಿ ಬಂದವರಲ್ಲವಲ್ಲ... ಎಷ್ಟೇ ಆಗಲಿ, ಅದು ಮಾತಾಪಿತೃಗಳ ಸನ್ನಿಧಾನ.

ಪ್ರಾಪಂಚಿಕ ಪರಿವರ್ತನೆ ಸುಧಾರಣೆಯಲ್ಲಿ ತಾವು ಮಾಡುವುದು ಪುಣ್ಯಕಾರ್ಯ. ದೇವೋಪಾಸನೆಯಲ್ಲಿ ಭಕ್ತಿಭಾವದ ಪರಾಕಾಷ್ಠೆಯಲ್ಲಿ ದೇವಾಸುರರಿಗೆಲ್ಲ ತಾವು ಮಾರ್ಗಪ್ರವರ್ತಕರಾಗಿದ್ದರೆ ಅದು ತಮ್ಮ ಸುದೈವವೆಂದೇ ತಿಳಿದವರು.

ನಾರದರು ಮುನ್ನಡೆದು ಆಸನಾರೂಢರಾದರು.  ಮಾತಾಪಿತೃಗಳ ಕಡೆಗೊಮ್ಮೆ ಸುದೀರ್ಘ ನೋಟ ಹರಿಸಿ,

"ಅದೇನು ಇಬ್ಬರೂ ಗಂಭೀರ ಚಿಂತೆಯಲ್ಲಿ ಮುಳುಗಿದ್ದೀರಿ..?" ಅಂದರು.

"ನಾರದ! ನಿನಗೆ ತಿಳಿಯದಿರುವುದೇನಿದೆ? ಭೂಲೋಕದ ಸ್ಥಿತಿಗತಿಗಳು. ಆಗಾಗ್ಗೆ ತಲೆದೋರುವ ಅವ್ಯವಸ್ಥೆಗಳು. ಸಜ್ಜನರೆಲ್ಲ ದೈವನಂಬಿಕೆಯಲ್ಲಿ ಎಂದಿಗಾದರೂ ತಮಗೆ ಒಳಿತಾಗುವುದೆಂದೇ ಆತ್ಮವಿಶ್ವಾಸ ಹೊಂದಿದವರು. ಅವರೆಂದಿಗೂ ಹತಾಶರಾಗಬಾರದಲ್ಲ.... ಕಡುಕಷ್ಟಪಡುವವರು ಕ್ರುದ್ಧರಾಗಿ ಅಡ್ಡದಾರಿ ಹಿಡಿದು ಭ್ರಷ್ಟರಾಗಿ ಮೋಸ ವಂಚನೆ, ಕಳ್ಳತನಗಳಿಗೆ ಮನಗೊಡಬಾರದು. ಕ್ರೂರಿಗಳಾಗಿ ಕೊಲೆಗಡುಕರಾಗಬಾರದು. ಕಲಿಯುಗದಲ್ಲಿ  ಕೇಡುಮಾಡುವವರಿಗೇ ಕಾಲ ಎಂದಾಗಬಾರದಲ್ಲವೇ..?"

"ಪಿತಾಮಹ!  ಲೋಕದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಜನರ ಅಜ್ಞಾನ ಅಂಧಕಾರಗಳೂ ಹೆಚ್ಚುವುವು. ಧರ್ಮವು ದಿನೇ ದಿನೇ ಕ್ಷಯಿಸುವುದು. ಹೀಗೆಯೇ ಧರ್ಮವು ಅಧೋಗತಿಗಿಳಿದು ಪೂರ್ಣನಾಶವಾದರೆ ಸೂರ್ಯೋದಯ ಸೂರ್ಯಾಸ್ಥಗಳೇ ಇರುವುದಿಲ್ಲ. ಜಗತ್ತು ತನ್ನ ಚಲನೆಯನ್ನೇ ನಿಲ್ಲಿಸಿ, ಭೂಮಿ ತನ್ನ ಅಕ್ಷದಮೇಲೆ ತಿರುಗದೇ ಧಗಧಗಿಸೀತಲ್ಲವೇ...?"

"ನಾರದ, ದುರ್ಜನರು ಧನಬಲ ದೇಹಬಲವೇ ಎಲ್ಲದಕ್ಕೂ ಮಿಗಿಲೆಂದುಕೊಂಡಿದ್ದಾರೆ. ಅವರ ಭಂಡತನಕ್ಕೆ ಅಸತ್ಯ, ಅಕ್ರಮ ಅವ್ಯವಹಾರಗಳಿಗೆ ಧರ್ಮವೇ ನಲುಗುವುದೆಂದರೇನು!"

"ಹೌದು ಪಿತಾಮಹ!  ದುರ್ಜನರು ಮಾಡಬಾರದ ಪಾಪಕೃತ್ಯಗಳನ್ನು ಮಾಡುತ್ತಾರೆ.  ಅವುಗಳಿಗೆ ಪುಣ್ಯಫಲ ಬಯಸುತ್ತಾರೆ. ತಾವೂ ಕಷ್ಟಪಡದೇ ಕಷ್ಟಪಟ್ಟು ದುಡಿಯುವವರನ್ನೂ ಶೋಷಣೆ ಮಾಡುತ್ತಾರೆ. ಹೆಣ್ಣನ್ನು ಭೋಗವಸ್ತುವೆಂದೇ ಬಯಸುತ್ತಾರೆ. ಲೈಂಗಿಕ ಕಿರುಕುಳ ನೀಡಿ ಹಿಂಸಿಸುತ್ತಾರೆ.  ಯುವಜನಾಂಗದಲ್ಲಿ ಶೀಲಚಾರಿತ್ರ‍್ಯಗಳು ಕಾಣೆಯಾಗುತ್ತಿವೆ. ಸ್ವಚ್ಚಂಧ ಪ್ರವೃತ್ತಿ ಸ್ವೇಚ್ಚಾಚಾರಗಳು ಹೆಚ್ಚಿವೆ. ಹರೆಯದ ಮಕ್ಕಳೇ ಹೆತ್ತವರಿಗೆ ಶತ್ರುಗಳಂತೆ ಕಾಣಿಸುವುದೂ ಶೋಚನೀಯವೇ..  ಮನುಷ್ಯನೂ ಒಂದು ಪ್ರಾಣಿ ಪಶು. ಅವನಿಗೇಕೆ ಜೀವನಮೌಲ್ಯಗಳೆಂಬ ಭಂಡತನದಿಂದ ಇರುವವರಿಂದಾಗಿಯೇ ಜನಜೀವನದಲ್ಲಿ ಕೋಲಾಹಲವೇ...ವಾಸಿಯಾಗದ ರೋಗರುಜಿನಗಳು ಇಲ್ಲವೇ ಇಲ್ಲವೆಂದರೂ ಮತ್ತೆ ಮತ್ತೆ ಬಿಟ್ಟೂ ಬಿಡದೇ ಬಾಧಿಸುತ್ತಿವೆಯಾದರೂ ಮನುಷ್ಯ ಮನುಷ್ಯನಾಗಿ ಬದುಕಲಿಚ್ಛಿಸಲಾರನೇಕೆ..?  ಪಣ್ಯಭೂಮಿ ಎಂದೇ ಹೆಸರಾದ ಭರತಖಂಡದಲ್ಲಿ ಇದೇನು ಕಲಿಗಾಲವೋ... ಕಲಿಪ್ರವೇಶವಾಗಿರುವ ಸೂಚನೆಯೇ..?"

ಈಗ ಮಾತೆ ಸರಸ್ವತಿ ನಸುಕೋಪದಿಂದಲೇ ಹೇಳಿದಳು-

"ನಾರದ, ಮೇಲೇರಿದ ಮೇಲೆ ಕೆಳಗಿಳಿಯುವುದು ಸಹಜವೆಂಬಂತೇ ಯಾವ ನೆಲದಲ್ಲಿ ಶ್ರೇಷ್ಠವೆನಿಸಿದ ಸನಾತನ ಧರ್ಮವು ಉಚ್ಚಸ್ಥಾನದಲ್ಲಿರುವುದೋ ಅದು ಒಂದೊಮ್ಮೆ ನೀಚ ಸ್ಥಾನವನ್ನೂ ಕಾಣುವುದಾಗಬೇಕಲ್ಲ.... ಎಲ್ಲಿ ಹೆಣ್ಣು ಗಂಡುಗಳ ನಡುವೆ ಅನೈತಿಕತೆ ಭೂತ ನರ್ತನ ಗೈಯುವುದೋ, ಎಲ್ಲಿ ಭ್ರಷ್ಟರ, ದುಷ್ಟರ ಅಟ್ಟಹಾಸ ಮೇರೆಮೀರಿ ಮೆರೆವುದೋ, ಎಲ್ಲಿ ಮನುಷ್ಯರ ಹಣವವೇ ಅವರನ್ನು ಅಣಕವಾಡುವುದೋ  ಅಲ್ಲಿ ಭೂದೇವಿ ಕೆರಳುತ್ತಾಳೆ. ಬರಗಾಲಗಳು ಕಾಡುತ್ತವೆ. ಚಂಡ ಪ್ರಚಂಡ ಬಿರುಗಾಳಿ, ಮಳೆಗಳಿಂದ ಭೂಮಿ ಕಂಪಿಸುತ್ತದೆ. ನದಿಗಳು ಸೊಕ್ಕಿ ಪ್ರವಾಹದಿಂದ ಬೋರ್ಗರೆಯುತ್ತವೆ. ವಸ್ತುತಂತ್ರಜ್ಞರೂ ಊಹಿಸರದಷ್ಟು ಭೀಕರ ಅನಾಹುತಗಳು ಸಂಭವಿಸುತ್ತವೆ. ನ್ಯಾಯ ನೀತಿಪರರು, ಸಕಲಶಾಸ್ತ್ರಕೋವಿದರೂ ತಲ್ಲಣಿಸುವಂತೆ ಸತ್ಯ ಧರ್ಮ ಸಂಸ್ಕೃತಿಗಳನ್ನೇ ಹೀಗಳೆದ ಅಧರ್ಮಕ್ಕೆ ಪ್ರಪಂಚದಲ್ಲಿ ಭರತಖಂಡವೇ ಸಾಕ್ಷಿಯಾಗುತ್ತದೆ. ಹೀಗೆ ಭವಿಷ್ಯೋತ್ತರವಾಗಿ ಧರ್ಮಸಂಸ್ಥಾಪನೆಗೆ ಸತ್ವಗುಣ ಸತ್ ಶಕ್ತಿಗಳಿಗೇ ಪ್ರಾಧಾನ್ಯತೆ ಬರಲು ನಡಯಬೇಕಾದುದೇನೆಲ್ಲವೂ ನಡೆದೇ ತೀರುತ್ತದೆ..."
ಮಂದೆ ಓದಿ>>>>ಭವಲೋಕದ ಚಿಂತೆ-೩

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ